ಈ ವಾರ ಬಿಡುಗಡೆಗೊಳ್ಳಲಿರುವ `ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರ ಅನೇಕ ಕಾರಣಗಳಿಂದ ಪ್ರೇಕ್ಷರನ್ನು ಸೆಳೆದುಕೊಂಡಿದೆ. ಅದೆಲ್ಲದರಲ್ಲಿ ಪ್ರಧಾನ ಕಾರಣವಾಗಿ ಕಾಣಿಸುವವರು ನಿರ್ದೇಶಕ ಹಯವದನ. ಇದು ಹೇಳಿಕೇಳಿ ಸ್ಪರ್ಧೆ ತೀವ್ರಗೊಂಡಿರುವ ದಿನಮಾನ. ಇಂಥಾ ಹೊತ್ತಿನಲ್ಲಿ ಒಂದರ ಹಿಂದೊಂದರಂತೆ ಹಿಟ್ ಧಾರಾವಾಹಿಗಳನ್ನು ನಿರ್ದೇಶನ ಮಾಡುತ್ತಾ ಕಿರುತೆರೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸವಾಲಿನ ಕೆಲಸ. ಅದನ್ನು ವರ್ಷಾಂತರಗಳ ಕಾಲ ಅತ್ಯಂತ ಯಶಸ್ವಿಯಾಗಿ ಸಾಧ್ಯವಾಗಿಸಿಕೊಂಡವರು, ಈ ಮೂಲಕ ಕಿರುತೆರೆ ಜಗತ್ತಿನಲ್ಲಿ ಸ್ಟಾರ್ ನಿರ್ದೇಶಕರಾಗಿ ನೆಲೆ ಕಂಡುಕೊಂಡವರು ಹಯವದನ. ಇಂಥಾ ನಿರ್ದೇಶಕರ ಸಾರಥ್ಯದಲ್ಲಿ ಸಿನಿಮಾವೊಂದು ರೂಪುಗೊಂಡಿದೆ ಅಂದರೆ ಸಹಜವಾಗಿಯೇ ಅದರತ್ತ ಕುತೂಹಲ ಗರಿಗೆದರಿಕೊಳ್ಳುತ್ತೆ. ಹೀಗೆ ಎಲ್ಲ ಕೋನಗಳಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಪಡೆದುಕೊಂಡಿರುವ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗಾಣುತ್ತಿದೆ.
ಅಗ್ನಿಸಾಕ್ಷಿ, ನಾಗಿಣಿ, ಕಮಲಿಯಂಥಾ ಅನೇಕ ಹಿಟ್ ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನ ಗೆದ್ದುಕೊಂಡಿರುವವರು ಹಯವದನ. ಹೀಗೆ ದಶಕಗಟ್ಟಲೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ಅವರ ಪಾಲಿಗೆ ಮಹಾ ಕನಸಾಗಿದ್ದದ್ದು ಸಿನಿಮಾ ನಿರ್ದೇಶನ. ಬ್ಯುಸಿ ಶೆಡ್ಯೂಲ್ ಗಳ ನಡುವೆಯೂ ಅದಕ್ಕಾಗಿ ತಯಾರಿ ನಡೆಸುತ್ತಾ ಬಂದಿದ್ದ ಹಯವದನ, ಬೇರೆಯದ್ದೇ ಅನುಭೂತಿ ನೀಡುವಂಥಾ, ಭಿನ್ನ ಬಗೆಯ ಕಥೆಯ ಮೂಲಕವೇ ಎಂಟ್ರಿ ಕೊಡಬೇಕೆಂಬ ತೀರ್ಮಾನಕ್ಕೆ ಬಂದಿದ್ದರು. ಈ ಕಾಲದ ಟ್ರೆಂಡಿಗೆ ತಕ್ಕಂತಿರುವ ಕಥಾ ಎಳೆಯನ್ನು ಸೃಷ್ಟಿಸಿ, ವರ್ಷಗಟ್ಟಲೆ ಶ್ರಮವಹಿಸಿ ಅದಕ್ಕೆ ಸಿನಿಮಾ ಸ್ಪರ್ಶ ನೀಡಿದ್ದರು. ಇದು ಹೇಳಿಕೇಳಿ ವ್ಲಾಗಿಂಗ್ ಟ್ರೆಂಡು ಹಬ್ಬಿರೋ ದಿನಮಾನ. ಇನ್ನು ಜರ್ನಿ ಕಥನಗಳಿಗಂತೂ ಚಿತ್ರರಂಗದಲ್ಲೊಂದು ಪ್ರತ್ಯೇಕ ಸ್ಥಾನವೇ ಇದೆ. ಅದೆಲ್ಲದರಲ್ಲಿ ಭಿನ್ನವಾಗಿ ನೆಲೆಗೊಳ್ಳುವಂತೆ ಹಯವದನ ಈ ಸಿನಿಮಾವನ್ನು ರೂಪಿಸಿದ್ದಾರಂತೆ.
ಮೂಲತಃ ಬಾಗಲಕೋಟೆಯವರಾದ ಹಯವದನ ಸಿನಿಮಾ ಲೋಕದ ಕನಸಿನ ಸೆಳವಿಗೆ ಸಿಕ್ಕು ಬೆಂಗಳೂರು ಸೇರಿಕೊಂಡವರು. ಆದರೆ, ಅವರನ್ನು ಬರಮಾಡಿಕೊಂಡಿದ್ದು ಮಾತ್ರ ಸೀರಿಯಲ್ ಲೋಕ. ವೈಶಾಲಿ ಕಾಸರವಳ್ಳಿ ನಿರ್ದೇಶನದ ಮೂಡಲಮನೆ ಧಾರಾವಾಹಿಯ ಮೂಲಕ ಹಯವದನ ಸೀರಿಯಲ್ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಆ ನಂತರ ಮುಕ್ತ ಧಾರಾವಾಹಿಯ ಮೂಲಕ ಟಿ.ಎನ್ ಸೀತಾರಾಂ ಗರಡಿಯಲ್ಲಿ ಪಳಗಿಕೊಳ್ಳುವ ಅವಕಾಶ ಕೂಡಿ ಬಂದಿತ್ತು. ಆ ನಂತರ ಸ್ವತಂತ್ರ ನಿರ್ದೇಶಕರಾಗಿದ್ದ ಹಯವದನ, ಬಾಹುಬಲಿ ಚಿತ್ರವನ್ನು ನಿರ್ಮಾಣ ಮಾಡಿದ್ದ ಪ್ರತಿಷ್ಠಿತ ಅರ್ಕಾ ಮೀಡಿಯಾ ವರ್ಕ್ಸ್ ಸಂಸ್ಥೆಯ ಭಾಗವಾಗಿಯೂ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಈ ಸಂಸ್ಥೆ ಅಗ್ನಿಸಾಕ್ಷಿ ಮತ್ತು ಶುಭ ಮಂಗಳ ಧಾರಾವಾಹಿಗಳನ್ನು ನಿರ್ಮಾಣ ಮಾಡಿತ್ತು.
ಹೀಗೆ ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದಿದ್ದ ಹಯವದನ ಎಲ್ಲೋ ಜೋಗಪ್ಪ ಮೂಲಕ ಹಿರಿತೆರೆಗೂ ಪ್ರವೇಶಿಸಿದ್ದಾರೆ. ಅವರಿಗೆ ಕಿರುತೆರೆ ಮತ್ತು ಹಿರಿತೆರೆಗಳ ನಡುವಿನ ಫರಕು ಮತ್ತು ಅವೆರಡನ್ನೂ ಹೇಗೆಲ್ಲ ಸಂಭಾಳಿಸಬೇಕೆಂಬುದರ ಸ್ಪಷ್ಟವಾದ ಅರಿವಿದೆ. ಒಂದು ಕಥೆಯ ಮೂಲಕ ವರ್ಷಗಟ್ಟಲೆ ಕಿರುತೆರೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಲೆ ಅವರಿಗೆ ಸಿದ್ಧಿಸಿದೆ. ಹಾಗಿರುವಾಗ ಗಟ್ಟಿ ಕಥೆಯ ಮೂಲಕ ಎರಡು ಗಂಟೆಗಳ ಕಾಲಾವಧಿಯಲ್ಲಿ ಹಿರಿತೆರೆ ಪ್ರೇಕ್ಷಕರನ್ನು ತೃಪ್ತಗೊಳಿಸೋದು ಅವರ ಪಾಲಿಗೇನೂ ಕಷ್ಟವಾಗಲಿಕ್ಕಿಲ್ಲ. . ಪವನ್ ಶಿಮಿಕೇರಿ ಮತ್ತು ಸಿಂಧು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೃಜನ್ ರಾಘವೇಂದ್ರ, ಚೇತನ್, ಹಯವದನ ಚಿತ್ರಕಥೆ, ವೇಣು ಹಸ್ರಾಳಿ ಸಂಭಾಷಣೆ, ನಟರಾಜು ಮದ್ದಾಲ ಛಾಯಾಗ್ರಹಣ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಶಿವಪ್ರಸಾದ್ ಸಂಗೀತ ನಿರ್ದೇಶನವಿರುವ ಈ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.