ಅದೊಂದು ಕಾಲವಿತ್ತು… ಕನ್ನಡ ಸಿನಿಮಾ ಜಗತ್ತು ಪರಭಾಷಾ ಚಿತ್ರರಂಗದ ಮಂದಿಯ ಪಾಲಿಗೆ ಟೀಕೆಯ, ಮೂದಲಿಕೆಯ ವಸ್ತುವಾಗಿದ್ದ ಕಾಲ. ಆದರೀಗ ಕನ್ನಡ ಸಿನಿಮಾ ರಂಗದಲ್ಲಿ ಬೇರೆಯದ್ದೇ ತೆರನಾದ ಅಧ್ಯಾಯವೊಂದು ಪುಟ ತೆರೆದುಕೊಂಡಿದೆ. ಸೋಲು ಗೆಲುವಿನಾಚೆ ಲೆಕ್ಕಾಚಾರ ಹಾಕಿದರೂ ಕೂಡಾ ಹೊಸಾ ಹರಿವು, ಹೊಸಾ ಆಲೋಚನೆಗಳಿಂದ ಇದೀಗ ಬೇರೆಯದ್ದೇ ತೆರನಾದ ಪರ್ವವೊಂದು ತೆರೆದುಕೊಂಡಿದೆ. ಸದ್ಯದ ಮಟ್ಟಿಗೆ ಅದರ ಮುಂದುವರೆದ ಭಾಗವಾಗಿ ಗೋಚರಿಸುತ್ತಿರುವ ಚಿತ್ರ (naguvina hugala mele movie) `ನಗುವಿನ ಹೂಗಳ ಮೇಲೆ’. ಇದು ವೆಂಕಟ್ ಭಾರದ್ವಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರವೆಂಬುದೂ ಕೂಡಾ ಇಂಥಾದ್ದೊಂದು ಗಾಢ ಭರವಸೆಗೆ ಪ್ರಧಾನ ಕಾರಣವೆಂಬಂತೆ ಭಾಸವಾಗುತ್ತದೆ.
ಮೊದಲೇ ಹೇಳಿದಂತೆ, ಕನ್ನಡ ಚಿತ್ರರಂಗವೆಂದರೆ ಮೂಗು ಮುರಿಯುತ್ತಿದ್ದ ನೆಲದಲ್ಲಿಯೇ ಇಂದು ಬೆರಗೊಂದು ಪ್ರತಿಷ್ಠಾಪಿತವಾಗಿದೆ. ಅದರ ಭಾಗವಾಗಿಯೇ ತೆಲುಗಿನಲ್ಲಿ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಖ್ಯಾತ ನಿರ್ಮಾಪಕ ಕೆ.ಕೆ ರಾಧಾ ಮೋಹನ್ ನಗುವಿನ ಹೂಗಳ ಮೇಲೆ ಕಥೆಯ ಬಗ್ಗೆ ಮೋಹಗೊಂಡು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ತೆಲುಗು ನಿರ್ಮಾಪಕರ ಆಗಮನವಾದಂತಾಗಿದೆ. ಅವರು ಒಂದಿಡೀ ಕಥೆಯನ್ನು ಬಹುವಾಗಿ ಮೆಚ್ಚಿಕೊಂಡು, ವೆಂಕಟ್ ಭಾರದ್ವಾಜ್ ಅವರ ನಿರ್ದೇಶನದ ಕಸುವಿನ ಮೇಲೆ ನಂಬಿಕೆಯಿಟ್ಟು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಅಚಿತಿಮವಾಗಿ ನಗುವಿನ ಹೂಗಳ ಮೇಲೆ ರೂಪುಗೊಂಡಿರುವ ಪರಿ ಕಂಡು ಖುಷಿಗೊಂಡಿದ್ದಾರೆ.
ಅಷ್ಟಕ್ಕೂ ಸಿನಿಮಾ ನಿರ್ಮಾಣವೆಂದರೇನೇ ಅದೊಂದು ಉದ್ಯಮ. ಅದರ ಆಚೀಚೆ ವ್ಯಾವಹಾರಿಕ ಲೆಕ್ಕಾಚಾರಗಳಷ್ಟೇ ಹಬ್ಬಿಕೊಂಡಿರುತ್ತವೆ. ಹೇಳಿಕೇಳಿ ಪಂಥಂ, ಬೆಂಗಾಲ್ ಟೈಗರ್ ನಂಥಾ ಅನೇಕ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿ ಕೋಟಿ ಕೋಟಿ ಲಾಭ ಕಂಡವರು ರಾಧಾ ಮೋಹನ್. ಅವರು ಮೆಚ್ಚಿಕೊಂಡು ನಿರ್ಮಾಣ ಮಾಡಿದ್ದಾರೆಂಬುದೇ ಈ ಸಿನಿಮಾದ ಅಸಲೀ ಆಂತರ್ಯದ ಗಟ್ಟಿತನಕ್ಕೆ ಸಾಕ್ಷಿ. ಅಂದಹಾಗೆ, ಈಗಾಗಲೇ ಒಂದಷ್ಟು ಭಿನ್ನ ಧಾಟಿಯ ಚಿತ್ರಗಳ ಮೂಲಕ ಗೆದ್ದಿರುವ ವೆಂಕಟ್ ಭಾರದ್ವಾಜ್, ಈ ಸಿನಿಮಾದಲ್ಲಿ ಎಳೆಯರಿಂದ ಮೊದಲ್ಗೊಂಡು ಎಲ್ಲ ವಯೋಮಾನದವರನ್ನೂ ತಾಕಬಲ್ಲ ನವಿರಾದ ಪ್ರೇಮ ಕಥಾನಕವನ್ನು ಅಡಕವಾಗಿಸಿದ್ದಾರೆ.
ಸಾಮಾನ್ಯವಾಗಿ, ಪ್ರೇಮ ಕಥೆಗಳು ಸದಾ ಕಾಲ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತವೆ. ಅದು ಪ್ರಯೋಗಾತ್ಮಕ ಗುಣ, ಹೊಸತನದಿಂದ ಶೃಂಗರಿಸಿಕೊಂಡಿದೆ ಎಂಬ ಸೂಚನಹೆ ಸಿಕ್ಕರೆ ಆ ಸೆಳೆತದ ತೀವ್ರತೆ ಮತ್ತಷ್ಟು ಹೆಚ್ಚಾಗಿರುತ್ತದೆ. ಸದ್ಯ ಈ ವಾರ ಬಿಡುಗಡೆಗೊಳ್ಳಲಿರೋ ನಗುವಿನ ಹೂಗಳ ಮೇಲೆ ಅಂಥಾದ್ದೊಂದು ನಿರೀಕ್ಷೆ, ಭರವಸೆಯ ಬಿಂದುಗಳು ಮೂಡಿಕೊಂಡಿವೆ. ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣವಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.