ಮಂಗಳೂರು ಮೂಲದ ನಟಿ ರಾಧಿಕಾ (actress radhika kumaraswamy) ಎತ್ತ ಹೋದಳು… ಹೀಗಂತ ಅದ್ಯಾರು ನೆನಪಿಸಿಕೊಂಡು ಹುಡುಕುತ್ತಿದ್ದಾರೋ ಗೊತ್ತಿಲ್ಲ. ಅಷ್ಟಕ್ಕೂ ಖುದ್ದು (kumaraswamy) ಕುಮಾರಸ್ವಾಮಿಗಳಿಗೂ ರಾಧಿಕಾ ಮೇಲೀಗ ಅಂಥಾದ್ದೊಂದು ಆಕರ್ಷಣೆ, ಕೌತುಕ ಉಳಿದುಕೊಂಡಂತಿಲ್ಲ. ಇದೆಲ್ಲ ಏನೇ ಇದ್ದರೂ ರಾಧಿಕಾ (radhika) ಒಂದಷ್ಟು ಕಿಮ್ಮತ್ತಿರುವ ನಟಿ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಆಕೆ ನಡೆದು ಬಂದ ದಾರಿ, ಬದುಕು ಪ್ರಹಾರ ನಡೆಸಿದಾಗೆಲ್ಲ ನಿತ್ತರಿಸಿಕೊಂಡು ಎದುರಿಸಿದ ರೀತಿ, ಬಣ್ಣದ ಜಗತ್ತಿನ ಮಿಣ್ಣಗಿನ ವಂಚನೆಗಳನ್ನೆಲ್ಲ ಮೀರಿಕೊಂಡ ಪರಿ ನಿಜಕ್ಕೂ ಅಚ್ಚರಿ. ಅದರ ಇಕ್ಕೆಲಗಳಲ್ಲಿ ಧುತ್ತನೆ ಉದ್ಭವಿಸಿದ್ದ ವಿವಾದಗಳೀಗ ವ್ಯಾಲಿಡಿಟಿ ಕಳೆದುಕೊಂಡಿವೆ. ಉಳಿದುಕೊಂಡಿರೋದು ಆಕೆಯ ನಟನೆಯ ಕಸುವು ಮತ್ತು ಅದರತ್ತ ಹಬ್ಬಿಕೊಂಡಿರುವ ಒಂದಷ್ಟು ಕ್ರೇಜ್ ಮಾತ್ರ!
ಹಾಗಿರೋದರಿಂದಲೇ, ಬಹಳಷ್ಟು ವರ್ಷಗಳ ನಂತರ ರಾಧಿಕಾ ಬಣ್ಣ ಹಚ್ಚಿರುವ ಭೈರಾದೇವಿ ಎಂಬ ಸಿನಿಮಾ ಆಗಾಗ ಸುದ್ದಿಯಾಗುತ್ತಿದೆ. ಸಾಕಷ್ಟು ವರ್ಷಗಳಿಂದ ಎಳೆದಾಡುತ್ತಿದ್ದರೂ ಕೂಡಾ ಭೈರಾದೇವಿ ಆಕರ್ಷಣೆ ಉಳಿಸಿಕೊಂಡಿದ್ದಾಳೆ. ಈ ಸಿನಿಮಾದ ನಾನಾ ಶೇಡುಗಳಿರುವ ಪಾತ್ರದಲ್ಲಿ ರಾಧಿಕಾ ನಟಿಸಿದ್ದಾರೆ. ಆಕೆ ಎಂಥಾ ಪಾತ್ರಕ್ಕಾದರೂ ಹೊಂದಿಕೊಂಡು ಜೀವ ತುಂಬಬಲ್ಲ ನಟಿ. ಒಂದು ಮೂಲದ ಪ್ರಕಾರ, ಈವರೆಗಿನ ಅಷ್ಟೂ ಸಿನಿಮಾಗಳಿಗಿಂತ ಭಿನ್ನವಾದ ಪಾತ್ರವೇ ರಾಧಿಕಾಗೆ ಸಿಕ್ಕಿದೆ. ಅಘೋರಿಯ ಪಾತ್ರದಲ್ಲಿಯೂ ಆಕೆ ನಟಿಸಿದ್ದಾರಂತೆ.
ಒಂದಷ್ಟು ಪೋಸ್ಟರುಗಳು, ಮತ್ತೊಂದಷ್ಟು ವಿವರಗಳ ಮೂಲಕ ಭೈರಾದೇವಿ ಚಿತ್ರ ಅಡಿಗಡಿಗೆ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಅಷ್ಟಕ್ಕೂ ಈ ಸಿನಿಮಾ ಶುರುವಾಗಿದ್ದದ್ದು ಕೊರೋನಾ ಪೂರ್ವ ಕಾಲದಲ್ಲಿ. ಏಕಾಏಕಿ ಕೊರೋನಾ ವೈರಸ್ಸು ಅಮರಿಕೊಂಡು, ವರ್ಷಗಟ್ಟಲೆ ಮುಂದುವರೆದಿದ್ದರಿಂದ ಭೈರಾದೇವಿ ಬೆದರಿ ಮೂಲೆ ಸೇರಿಕೊಂಡಿದ್ದಳು. ಈ ಕಾಲಾವಧಿಯಲ್ಲಿ ಅದೆಷ್ಟೋ ಸಿನಿಮಾಗಳು ಉಸಿರು ಚೆಲ್ಲಿದ್ದವಲ್ಲಾ? ಈ ಸಿನಿಮಾ ಕೂಡಾ ಅದೇ ಸಾಲಿಗೆ ಸೇರಿರಬಹುದೆಂದೇ ಅನೇಕರು ಅಂದುಕೊಂಡಿದ್ದರು. ಆದರೀಗ ಅದು ಸುಳ್ಳಾಗಿದೆ!
ಭೈರಾದೇವಿ ಚಿತ್ರದ ಉಳಿಕೆ ಕೆಲಸ ಕಾರ್ಯಗಳೀಗ ಭರದಿಂದ ನಡೆಯುತ್ತಿವೆ. ರವಿಶಂಕರ್, ರಮೇಶ್ ಅರವಿಂದ್ ಮುಂತಾದವರು ವಿಶಿಷ್ಟ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವೀಗ ತೆರೆಗಾಣಲು ತಯಾರಿ ನಡೆಸುತ್ತಿದೆ. ಇದರೊಂದಿಗೆ ಕುಮಾರನ ಸಖಿ ರಾಧಿಕೆಯ ರಂಗಪ್ರವೇಶಕ್ಕೆ ಸುಸಜ್ಜಿತವಾದ ಅಖಾಡವೊಂದು ತಯಾರುಗೊಳ್ಳುತ್ತಿದೆ. ಒಂದುವೇಳೆ ಈಗ ಹಬ್ಬಿಕೊಂಡಿರುವ ಹೈಪಿಗೆ ಸರಿಸಮನಾಗಿ ಸಿನಿಮಾ ಮೂಡಿ ಬಂದಿದ್ದೇ ಹೌದಾದರೆ, ಖಂಡಿತವಾಗಿಯೂ ದೊಡ್ಡ ಮಟ್ಟದ ಗೆಲುವು ಸಿಗುತ್ತದೆ. ಹಾಗೇನಾದರೂ ಆದರೆ, ಅದು ರಾಧಿಕಾ ಪಾಲಿಗೆ ಎರಡನೇ ಇನ್ನಿಂಗ್ಸ್ ಗೆ ಭರ್ಜರಿ ಓಪನಿಂಗ್ ಸಿಕ್ಕಂತಾಗುತ್ತೆ. ಸದ್ಯದ ಮಟ್ಟಿಗೆ ರಾಧಿಕಾ ಕಡೆಯಿಂದಲೂ ಅಂಥಾದ್ದೇ ಆವೇಗದ ತಯಾರಿಗಳು ನಡೆಯುತ್ತಿವೆ. ಮಿಕ್ಕುಳಿದ ಪ್ರಶ್ನೆಗಳಿಗೆಲ್ಲ ಇಷ್ಟರಲ್ಲೇ ಉತ್ತರ ಸಿಗುವ ನಿರೀಕ್ಷೆಗಳಿವೆ!